ನೀನೊಂದು ಪತ್ರ ಬರೆಯೊ ಗೆಳೆಯ...

Dear

ಒಂದೊಂದು ಸಲ ಎಷ್ಟು ಇಷ್ಟ ಆಗ್ತೀಯ ಅಂದ್ರೆ, ನಿನ್ನ ಕೈಗೆ ನನ್ನ ಬದುಕನ್ನು ಪೂರ್ತಿಯಾಗಿ ಒಪ್ಪಿಸಿ ನೆಮ್ಮದಿಯಾಗಿದ್ದುಬಿಡೋಣ ಅನ್ನಿಸಿ ಬಿಡುತ್ತೆ. ಪರಿಚಯವಾದ ದಿನದಿಂದಲೂ ಇದೇ ಭಾವ. ಪುಟ್ಟ ಮಗುತರ ನೋಡ್ತೀಯ. ಹಾಗೊಂದು ವೇಳೆ ನೀನು ಸಿಗದೇ ಹೋಗಿದ್ದರೆ, ಈ feeling ಸಿಗ್ತಾನೆ ಇರ್ಲಿಲ್ಲವಾಗಿತ್ತು. ನಂಗೊತ್ತು, ನಾನು ಚಂದ ಇದ್ದಿನಿ. ಮಾತಿನಲ್ಲೊಂದು ಆತ್ಮೀಯತೆ ಇರುತ್ತೆ, ಹುಡುಗರು ಇಷ್ಟಪಡೋ ಎಷ್ಟೋ ಸಂಗತಿಗಳು ನನ್ನಲ್ಲಿವೆ. ಹಾಗೆ, ಪರಿಚಯಾದ ಸ್ವಲ್ಪ ದಿನಗಳಲ್ಲೇ ಅವರು ನನ್ನ ಪ್ರೀತಿಸೋಕೆ start ಮಾಡ್ತಾರೆ ಅಂದರೆ ಅದು ನಂಗೆ ಹೊಸತಲ್ಲ...! ಚಿಕ್ಕಂದಿನಿಂದಲೂ ಹುಡುಗರ ಜೊತೆಲೇ ಬೆಳೆದವಳು. ಎಷ್ಟೊಂದು ಅಣ್ಣ ತಮ್ಮಂದಿರ ಮಧ್ಯೆ, ಈಡಿ ಕುಟುಂಬಕ್ಕೆ ಒಬ್ಬಳೆ ಮಗಳಾಗಿ ಹುಟ್ಟಿದವಳು. ನನಗೆ, ಗೆಳತಿಯರಿಗಿಂತ ಗೆಳೆಯರೇ ಹೆಚ್ಚು. ಆದರೆ ನನ್ನಲ್ಲಿ, ನಿಜವಾಗಲೂ, 'ಜೀವದ ಗೆಳೆಯ' ಬೇಕು ಅನ್ನೊ ಆಸೆ ಮುಡಿಸಿದ್ದು ಮಾತ್ರ ನೀನೇ.

ಚಿಕ್ಕಂದಿನಿಂದಲೂ ಅಷ್ಟೆ, ನನ್ನ ಆಸೆಗಳೆಲ್ಲ ನೆರವೇರಿವೆಯೇ ಹೊರತು, ನೆರವೇರದೆ ಇರುವಂತಹುದು ನನಗೆ ನೆನಪಿಲ್ಲ. ಅಪ್ಪಾಜಿ, ಅಣ್ಣಂದಿರು ನನ್ನ ಆಸೆಗಳನ್ನೆಲ್ಲ ನೆರವೇರಿಸಿದ್ದಾರೆ. ಮನೆಯಿಂದ ದೂರ ಇದ್ದೆ ಬೆಳೆದವಳು ನಾನು. ಅಪ್ಪಾಜಿ ನನ್ನನ್ನು ಯಾವುದಕ್ಕೂ ನಿರ್ಭಂದಿಸಿಲ್ಲ. ಅಮ್ಮ ಆಣೆ ಪ್ರಮಾಣ ಮಾಡಿಸಿಕೊಂಡಿಲ್ಲ. ನಾನು ಮೊದಲಿನಿಂದಲೂ ಅಷ್ಟೆ ನನಗೆ ಇಷ್ಟವಾದುದನ್ನೇ ಮಾಡುತ್ತ ಬಂದೆ. ಯಾವುದಕ್ಕೂ ಯಾರೂ ನಿರ್ಭಂದನೆ ಮಾಡಿಲ್ಲ. ಬೇಸರಿಸಿಕೊಂಡಿಲ್ಲ. ಎಲ್ಲ ಗೆಳೆಯ, ಗೆಳತಿಯರು ರೇಗಿಸುತ್ತಿದ್ದರು. 'ರಾಜಕುಮಾರಿ' ಅಂತಿದ್ದರು. ಈ ರಾಜಕುಮಾರಿಗೆ ರಾಜಕುಮಾರ ಎಲ್ಲಿದ್ದಾನೋ? ಯಾವಾಗ ಬರುವನೋ ಅಂತೆಲ್ಲ ರೇಗಿಸುತ್ತಿದ್ದರು. ಆಗಲೂ ಯಾವ ರಾಜಕುಮಾರನೂ ಕನಸಿನಲ್ಲೂ ಬಂದು ಕಾಡಿರಲಿಲ್ಲ.

ಆದರೆ ನಿನ್ನ ಪರಿಚಯವಾದಂದಿನಿಂದ ಅದೇನಾಯಿತು ಹೇಳು? ಎಲ್ಲಿಂದಲೋ ಎದ್ದು ಬಂದ ಕನಸೊಂದು ನನ್ನ ನಿದ್ದೆ ಕೆಡಿಸಿಬಿಟ್ಟಿತಲ್ಲ? ಮೊದಮೊದಲು ಎನೂ ಇಲ್ಲ ಅಂದುಕೊಂಡೆ. ಆದರೆ ಮನಸ್ಸು ಕೇಳಲಿಲ್ಲ. ನಿನ್ನ ಬಗ್ಗೆ ತಿಳಿದುಕೊಳ್ಳೊ ಹಂಬಲ, ಮಾತನಾಡೋ ತವಕ. ಹತ್ತೇ ಹತ್ತು ನಿಮಿಷದ ಮಾತಿಗಾಗಿ ದಿನವಿಡೀ ಕಾದಿರುತ್ತಿದ್ದೆ. ನಾಳೆ ಸಿಗಲ್ಲ ಅಂತ ಅಂದು ಹೋದರೂ, ಮಾರನೇಯದಿನ ಮನಸ್ಸು ತಡೆಯದೆ ಓಡಿ ಬರುತ್ತಿದ್ದೆ..! ನಿನಗಾಗೆ ಕಾದಿದ್ದು, ಅಚಾನಕ್ಕಾಗಿ ಸಿಕ್ಕಿರುವಂತೆ ಆಶ್ಚರ್ಯ ಪಡುತ್ತಿದ್ದೆ...! ಅಕಸ್ಮಾತ್ ಆಗಿ ಸಿಕ್ಕ ಹುಡುಗ, ಅಕಸ್ಮಾತ್ ನನ್ನ ಮಾತನಾಡಿಸಿದ ಹುಡುಗ - ಈ ಪರಿ ಇಷ್ಟವಾಗುವುದುಂಟೆ? ಇದು ಇಷ್ಟವಾ? ಮೋಹವಾ? ಪ್ರೀತಿನಾ? ಸುಳ್ಳೆ ಕಾಡುತ್ತಿರುವ ಒಂದು ಕನಸು ಮಾತ್ರವಾ?!

ಎಷ್ಟೋ ಸಲ ಈ ಪ್ರಶ್ನೆಯನ್ನು ಕೇಳಿಕೊಂಡಿದ್ದೆನೆ. ನಿನ್ನ ಆತ್ಮೀಯತೆಯೊಂದೆ ಈ ಪ್ರಶ್ನೆಗಳಿಗೆ ಉತ್ತರದಂತೆ ನನ್ನ ಮನದಲ್ಲೊಂದು ಹೂದೋಟ ಅರಳಿಸಿ ಸುಮ್ಮನಾಗಿಸುತ್ತದೆ. ಕೇಳಿದರೆ ನಿಂಗೆ ಸಿಟ್ಟು ಬರುತ್ತದೆನೋ? ಆದ್ರೂ ಹೇಳ್ತಿನಿ. ನಂಗೆ ನಿನ್ನನ್ನು ಕಂಡರೆ ಇಷ್ಟ. ನಿನ್ನ ಜೊತೆನೇ ಬದುಕಬೇಕು ಅನ್ನಿಸುತ್ತದೆ. ನೀನು ನನಗೆ ಮಾತ್ರ ಬೇಕು ಅನ್ನಿಸುತ್ತದೆ. ನೀನು ಇಷ್ಟ ಪಡೋ ಹಾಡುಗಳೆಲ್ಲ ನಂಗೂ ಇಷ್ಟ. ಬ್ಲಾಕ್ ಜೀನ್ಸ್, ವೈಟ್ ಶರ್ಟ್ ಹಾಕಿದ್ರೆ ತುಂಬಾ ಚೆನ್ನಾಗಿ ಕಾಣ್ತಿಯ. ನೀನ್ ಸಿಗರೇಟ್ ಸೇದೋದು ನಂಗೆ ಇಷ್ಟ ಆಗಲ್ಲ. ಭಯ ಆಗುತ್ತೆ..! ಆದರೆ ನೀನು ಸಿಗರೇಟ್ ಸೇದೋವಾಗ ನಿನ್ನನ್ನೆ ನೋಡ್ತಾ ಇರ್ಬೆಕು ಅನ್ಸುತ್ತೆ. ಒಂದು ದಿನ ಅಡಿಗೆ ಮಾಡಿ ನನಗೆ ಊಟ ಮಾಡಿಸಿದ್ರೆ ನಂಗೆ ತುಂಬಾ ಇಷ್ಟ ಆಗುತ್ತೆ. ನಿನ್ನ ತೊಡೆಮೇಲೆ ತಲೆ ಇಟ್ಟು ಮಲಗಬೇಕು ಅನಿಸುತ್ತೆ - ಎಲ್ಲ ಇವತ್ತೆ ಬೇಕು ಅನ್ನಿಸಿಬಿಡುತ್ತೆ. ನಾನು ಯಾವುದಕ್ಕೂ ಇಷ್ಟೊಂದು ತೀವ್ರವಾಗಿ ಚಡಪಡಿಸಿದವಳಲ್ಲ. ಇದನ್ನೆಲ್ಲ ಅಪ್ಪಾಜಿಗೆ ಹೇಳಿ ಬಿಡೋಣ ಅನ್ನಿಸ್ತ ಇದೆ. ನಂಗೆ ಮದುವೆ ಮಾಡಿ ಅಂತ ಹೇಳೋದು ತಪ್ಪಾ? ನಂಗೊತ್ತಿಲ್ಲ.

ಅಷ್ಟು ಹೇಳಿದರೆ ಸಾಕು. ಅಪ್ಪಾಜಿ ನಿನ್ನ ಹುಡುಕಿಕೊಂಡು ಬಂದು ಬಿಡುತ್ತಾರೆ. ಮಗಳು ಯಾವತ್ತು ಏನು ಕೇಳಿದರೂ ಬೇಡ ಅಂದವರಲ್ಲ. ಅದರು ಬಂದ ದಿನ ಪ್ಲೀಸ್, ಸಿಗರೇಟ್ ಬೇಡ. ಇವತ್ತಿನವರೆಗೆ ಸಿಗರೇಟೇನು, ಕಾಫಿ ಸಹ ಕುಡಿದವರಲ್ಲ ಅಪ್ಪಾಜಿ. ನಿನ್ನ ಕೈಯಲ್ಲಿ ಸಿಗರೇಟ್ ನೋಡಿದರೆ ನೊಂದುಕೊಳ್ತಾರೆನೋ..! ಅವತ್ತು, ನಂಗೋಸ್ಕರ, ವೈಟ್ ಶರ್ಟ್ ಹಾಕ್ಕೊ. ಇವಾಗ್ಲೇ ಹೇಳಿ ಬಿಡ್ತೀನಿ ಅಪ್ಪಾಜೀನ ನೋಡಿ ಜಲಸ್ ಆಗಬೇಡ. ಅಪ್ಪ ನನ್ನ first boy friend. ನಿಂಗೆ ಅವರು ತುಂಬಾ ಇಷ್ಟ ಅಗ್ತಾರೆ ಅಂತ ನಂಬಿಕೆ ಇದೆ. ಇನ್ನು ಅಮ್ಮ.... ಅಮ್ಮ ತುಂಬಾ ಚೆಂದ ಇದ್ದಾಳೆ. ದಂತದ ಗೊಂಬೆ. ಅವಳಷ್ಟು ಚೆಂದಗಿಲ್ಲ ನಾನು. ಪ್ರೀತ್ಸೋದು ನಮ್ಮನೇಲಿ ಹೆರಿಡಿಟರಿ. ಅಪ್ಪಾಜೀ ಕೂಡ ಅಮ್ಮನ್ನು ಪ್ರೀತಿಸಿಯೇ ಮದುವೇ ಆಗಿದ್ದು. ಮದುವೆಯಾದ ದಿನದಿಂದ ಇವತ್ತಿನ ತನಕ ಹೂವಲ್ಲಿ ಇಟ್ಟೇ ನೋಡ್ಕೊಂಡಿದಾರೆ. ಫ್ರೆಂಡ್ಸ್ ಥರಾ ಇರ್ತಾರೆ. ಅವರಿಬ್ಬರ ನಡುವೆ ಗುಟ್ಟುಗಳಿಲ್ಲ. ಅಮ್ಮ ಯಾವತ್ತೂ ಅಪ್ಪಾಜೀನ ಏನೂ ಕೇಳಲ್ಲ. ಅಪ್ಪಾಜೀ, ಅಮ್ಮನ ಮುಂದೆ ಯಾವುದನ್ನೂ ಮುಚ್ಚಿಡಲ್ಲ. ನಂಗೆ, ಅವರ ಹುಸಿ ಮುನಿಸು, ಪ್ರೀತಿ, ಗೆಳೆತನ ಎಲ್ಲ ಇಷ್ಟವಾಗುತ್ತೆ. ಅಪ್ಪಾಜೀಗೆ promise ಮಾಡಿ ಹೇಳು; ನಾವಿಬ್ರೂ ಹಾಗೆ ಇರ್ತಿವಿ ಅಂತ. ನನ್ನನ್ನೂ ಹಾಗೆ ನೋಡ್ಕೋತೀಯ ಅಂತ.

ಆದ್ರೆ ಕೇಳು: ಚೆನ್ನಾಗಿ ನೋಡಿಕೊಳ್ಳೊದು ಅನ್ನೊದಕ್ಕೆ ನಂಗೆ ನನ್ನದೇ ಆದ ಕಾನ್ಸೆಫ್ಟ್ ಇದೆ. ತುಂಬಾ ದುಡ್ಡು, ಕಾರು, ಬಂಗಲೆ, ಒಡವೆ, ದೇಶ ದೇಶ ಸುತ್ತಿಸೋದು ಇವೆಲ್ಲ ಏನೂ ಬೇಡ ನನಗೆ. ಒಂದೇ ಒಂದು promise ಮಾಡು. ಯಾವತ್ತೂ ನಂಗೆ ನಿನ್ನ ಸಾಹಚರ್ಯ ಉಸಿರುಗಟ್ಟಿಸೋಹಾಗೆ ಆಗಲ್ಲ ಅಂತ. ಯಾವತ್ತೂ ನಂಗೆ 'ಯಾಕಾದರೂ ಇವನನ್ನು ಮದುವೆ ಆದ್ನೋ' ಅನ್ನೋ ಹಾಗೆ ಅನ್ನಿಸದೆ ಇರೋ ತರಹ ನೋಡ್ಕೋತಿನಿ ಅಂತ. ಯಾವತ್ತೂ ನಾನು ಒಬ್ಬಂಟಿಯಾಗಿ ಒಳಮನೆಯ ಕತ್ತಲೆಯಲ್ಲಿ ನಿಂತು ಕಣ್ಣಿರಿಡೋ ಹಾಗೆ ಮಾಡಲ್ಲ ಅಂತ. ಕಡೇ ಮಾತು ಹೇಳ್ತೀನಿ ಕೇಳು:

ಎಷ್ಟು ದಿನ ಬದುಕಿರುತ್ತಿನೋ ಗೊತ್ತಿಲ್ಲ. ಆದ್ರೆ ಬದುಕಿರೋಷ್ಟು ದಿನ ನಿನ್ನ ಜೊತೆ ನಗುತ್ತಿರಬೇಕು ಅನ್ನೊ ಆಸೆ. ಒಂದು ಕ್ಷಣಕ್ಕೂ ನೀನು ಬೇಸರಿಸದಂತೆ ನೋಡಿಕೊಳ್ತೀನಿ. I will be always with you. ಒಬ್ಬ ಹುಡುಗಿ ತಾನು ಮನಸಾರೆ ಪ್ರೀತಿಸಿದ ಹುಡುಗನಿಂದ ನಿನ್ನೆನನ್ನು ಬಯಸಲು ಸಾಧ್ಯ ಹೇಳು? ಬದುಕು ತುಂಬಾ ಕಾಡುತ್ತೆ. job, money, ಖಾಯಿಲೆ, ಬೇಸರ, ಜಗಳ ಹೀಗೆ.. ಎಲ್ಲ ಕಾಡುತ್ತವೆ. ಕೈಹಿಡಿದು ಜಗ್ಗುತ್ತವೆ. ಆದರೆ ಏನೇ ಆದರೂನೂ ಇಬ್ಬರೂ ಕೊನೆವರೆಗೂ ಜೊತೆಯಲ್ಲಿರ್ತೀವಿ.. ಇವತ್ತಿನ ತರಹವೇ.. ಅದೇ ಪ್ರೀತಿ, ಆತ್ಮೀಯತೆಯಿಂದ ಅಂತ ಪ್ರಾಮಾಣಿಕವಾಗಿ ಹೇಳಿಕೊಂಡುಬಿಟ್ರೆ ಸಾಕು.
ನಾವು ಚೆನ್ನಾಗಿರ್ತೀವಿ.
ಅಂಥಹುದೊಂದು ನಂಬಿಕೆ ಇಟ್ಟುಕೊಂಡೆ ಇಷ್ಟೆಲ್ಲ ಬರ್ದಿದೀನಿ. ನಿಂಗಿಷ್ಟವಾಗುತ್ತೆ ಅಂತ ನಂಬಿಕೆ ಇದೆ. ನೀನೊಂದು ಪತ್ರ ಬರಿ. ಅದರಲ್ಲಿ ನಾನಿರ್ತೀನಿ...!

ನಿನ್ನವಳು.

ಆಯುಷ್ಯ ಮುಗಿದು ಹೋಗಿತ್ತು..... ಎದ್ದು ಬಂದು ಬಿಟ್ಟೆ...

'ಇಷ್ಟೇ ನೋಡು.. ಇನ್ನೂ ಅಲ್ಲೇ ಇರಲು ಮನಸ್ಸೇ ಬರಲಿಲ್ಲ. ಬಿಟ್ಟು ಬಂದು ಬಿಟ್ಟೆ' ಅಂತ ವಿವರಿಸುತ್ತಿದ್ದೆ.

ಅದು ನಾನು, ಅಚಾನಕ್ಕಾಗಿ PG ಬಿಟ್ಟು ಬಂದ ವಿವರಣೆ. ನಿನ್ನೆ ಮೊನ್ನೆಯ ತನಕ ನನ್ನದೇ ಮನೆಯೇನೋ ಅನ್ನುವಂತಿದ್ದ ಜಾಗ, ಸರಿಯಾಗಿ ಒಂದುಮುಕ್ಕಾಲು ವರ್ಷ ನನಗೆ ಆಶ್ರಯ ಕೊಟ್ಟ ಜಾಗ, ಊಟ, ತಿಂಡಿ, firends, ಹರಟೆ, ಮಸ್ತಿ, ಪ್ರೀತಿಯ ಆಂಟಿ, ಎಷ್ಟೋ ರಾತ್ರಿಯ ವರೆಗೂ TV ನೋಡುತ್ತಾ ಹರಟೆ ಹೊಡೆಯೋದು, birthday ಗಳು, ಹಬ್ಬಗಳು ಇತ್ಯಾದಿ ಇತ್ಯಾದಿ.. ಎಲ್ಲಾ PG ನಲ್ಲೇ. ಎಲ್ಲಾ ಚೆನ್ನಾಗಿತ್ತು. ಇದ್ದಕ್ಕಿದ್ದ ಹಾಗೆ ಏನಾಯಿತು? ಅಸಲಿಗೆ ಏನೂ ಆಗಲಿಲ್ಲ. ಅವುಗಳೆಲ್ಲದರ ಮಧ್ಯದಿಂದ ಎದ್ದು ಬಂದುಬಿಟ್ಟೆ. 'ಮದುವೆ ಆಗೇ ಇಲ್ಲಿಂದ ಹೋಗೋದು' ಪದೇ ಪದೇ ನಾನಾಡುತ್ತಿದ್ದ ಮಾತು ಇದು. ಈಗ ಆಗಿದ್ದೇನು? ಅಂತಹ ಬೇಜಾರೇನೂ ಆಗಿರಲಿಲ್ಲ. ಹೇಳಿಕೊಳ್ಳುವಂತ ಯಾವ ಕಾರಣವೂ ಇಲ್ಲ. PG ಎಂಬ ಹೆಸರಿನಲ್ಲಿದ್ದ ಒಂದು magic ಸತ್ತು ಹೋಯಿತಾ?

ಕೆಲವೊಮ್ಮೆ ಕಾರಣಗಳಿರದೇನೆ ಪ್ರೀತಿ ಮಾಡ್ತೀವಿ, ಜಗಳ ಆಡ್ತೀವಿ, ಗೆಳೆತನ ಮಾಡ್ತೀವಿ, ಜೊತೆಗೇ ಹೀಗೆ ಸುಮ್ಮನೇ ಎದ್ದು ಬಂದು ಬಿಡುತ್ತೀವಿ. ಮೊನ್ನೆ ನನ್ನ ಗೆಳತಿಯೊಬ್ಬಳು ಹೇಳ್ತ ಇದ್ದಳು 'ತುಂಬಾ ಹಚ್ಕೊಂಡಿದ್ದೆ ಕಣೆ ಅವನ್ನ. ಎಲ್ಲ ಚೆನ್ನಾಗೆ ಇತ್ತು. ಈಗ avoid ಮಾಡ್ತಾ ಇದಾನೆ. ಕಾರಣಾನೇ ಗೊತ್ತಿಲ್ಲ ಕಣೆ' ಅಂತ ಗೋಳಾಡ್ತ ಇದ್ದಳು.
'ನಾವು ಪ್ರೀತಿಸಿದವರು ದೂರವಾದಾಗ, ಅವರಿಗೆ ಸದ್ಯಕ್ಕೆ ನಮ್ಮ ನೆಸೆಸಿಟಿ ಇರಲಿಕ್ಕಿಲ್ಲ. ಅದಕ್ಕೆ ಹೊರಟು ಹೋಗಿದ್ದಾರೆ ಅಂತ ಅಂದುಕೊಂಡು ನೋಡು ಮನಸ್ಸಿಗೆ ರೀಲೀಫ್ ಸಿಕ್ಕಂತಾಗುತ್ತದೆ.' ಅಂತ ರವಿ ಬೆಳಗೇರೆ ಸರ್ ಒಂದು ಕಡೆ ಬರೀತಾರೆ. ಆ ಮಾತು ನೆನಪಾಯ್ತು. ಅದನ್ನೇ ಅವಳಿಗೂ ಹೇಳಿದೆ. ಅವರು ನಮ್ಮನ್ನ use ಮಾಡಿಕೊಂಡರು ಅನ್ನೊಕ್ಕಿಂತ, ನಮ್ಮ ಅವಶ್ಯಕತೆ ಸದ್ಯಕ್ಕೆ ಅವರಿಗೆ ಇಲ್ಲ ಅಂತ ಅಂದುಕೊಂಡರೆ ಸ್ವಲ್ಪ ಕಡಿಮೆ ನೋವಾಗುತ್ತದೆ. ಸಂಬಂಧಗಳು ಮುರಿದು ಬಿದ್ದಾಗ 'ಬಿಟ್ಟು ಹೋದವರಿಗಿಂತ' ಹೆಚ್ಚಾಗಿ 'ಉಳಿದುಕೊಂಡು ಬಿಟ್ಟಿರುತ್ತಾರಲ್ಲ' ಅವರು ಹೆಚ್ಚು ದುಃಖ ಪಡುತ್ತಾರೆ.

ಎಷ್ಟೋ ವಿಷಯಗಳು ಅವಶ್ಯಕತೆಯ ಮೇಲೇ ನಿಂತಿರುತ್ತವೆ. ಈ ಸಂಬಂಧಗಳು- ಪ್ರೀತಿನೂ ಹಾಗೇನೆ. ಅವಶ್ಯಕತೆ ಅನ್ನೊದು ಮುಗಿದ ತಕ್ಷಣ ಪ್ರೀತಿ ಕಡಿಮೆ ಆಗುತ್ತದೆ. ಸಂಬಂಧದಲ್ಲಿ ಬಿರುಕು ಬಿಡುತ್ತದೆ. ಇಬ್ಬರ ಮಧ್ಯೆ ಆಗುವ ಜಗಳಗಳು ರಾಜಿಯಲ್ಲಿ ಮುಕ್ತಾಯವಾಗುವುದಿಲ್ಲ. ಯಾರೋ ಒಬ್ಬರು sorry ಕೇಳಿದರೆ ಮುಗಿಯಿತು ಅನ್ನೊ ಮಾತು ನೆನಪಿಗೆ ಬರುವುದೇ ಇಲ್ಲ. ಮೊದಲು ನೆನಪಿಗೆ ಬರುವುದೇ 'ನಾನ್ಯಾಕೆ sorry ಕೇಳಲಿ' ಅನ್ನೊದು. ಮೊದಲಿನಂತೆ ಭೇಟಿಯಾಗಲು ಚಡಪಡಿಸುವುದಿಲ್ಲ. ಇಬ್ಬರ ಸಂಬಂಧದಲ್ಲಿ ಅದು ಕೊನೆಯ ಕಾಲ. ಸಂಬಂಧ ಕಡಿದು ಹೋಗಲಿಕ್ಕೆ ದೊಡ್ಡ ದೊಡ್ಡ ಕಾರಣಗಳೇ ಬೇಕಿರುವುದಿಲ್ಲ. ಹಾಗೆ ಎಷ್ಟೋ ವರ್ಷಗಳಿಂದ ಇದ್ದ ಒಂದು ಆತ್ಮೀಯತೆ ಒಂದು ಕ್ಷಣದಲ್ಲಿ ಮುರಿದು ಬೀಳಬಹುದು.

ಎಷ್ಟೋ ಇಷ್ಟಪಟ್ಟು, ಮನೆಯವರ ಜೊತೆಗೆಲ್ಲ ಹೊಡೆದಾಡಿ ಮದುವೆ ಆಗಿರುತ್ತಾರೆ. ಸ್ನೇಹಿತರ ಬಳಗದ ಮಧ್ಯೆ ಅಮರ ಪ್ರೇಮಿಗಳು. ಸಂಬಂಧಿಗಳ ಮಧ್ಯೆ ಆದರ್ಶ ದಂಪತಿಗಳು. 'ಎನೇ ಆಗ್ಲಿ ಚೆನ್ನಾಗಿದ್ದಾರೆ ಬಿಡಿ' ಅಂತ ಅಪ್ಪ, ಅಮ್ಮನ ಕಣ್ಣಲ್ಲೊಂದು ಸಮಾಧಾನ. ಅಂತಹ ಜೋಡಿಗಳನ್ನು ಒಮ್ಮೆ ಸೂಕ್ಷ್ಮವಾಗಿ ನೋಡಿ, ಪ್ರೀತಿ, ಪ್ರೇಮ ಅನ್ನುವುದರ ಆಚೆಗೆಲ್ಲೋ ಅವಶ್ಯಕತೆ ಅನ್ನುವುದು ಗಟ್ಟಿಯಾಗಿರುತ್ತದೆ. ಪ್ರೀತಿಸಿದ ಹೊಸದರಲ್ಲಿ ಸೆಳೆತ, ಸಂತೋಷ, ಮಾದುರ್ಯ ಎಲ್ಲ. ಅದು ಸತ್ತಮೇಲೂ ಇಬ್ಬರ ನಡುವಿನ ಸಂಬಂಧ ಬದುಕಿದೆ ಅಂದರೆ ಅದಕ್ಕೆ ಕಾರಣ ಕೇವಲ ಅವಶ್ಯಕತೆ. ಸಂಬಂಧ ನಿಂತಿರುವುದೆ ಈ ಅವಶ್ಯಕತೆ ಅನ್ನೋ ಬೇರಿನ ಮೇಲೆ.

ಇತ್ತೀಚೆಗೆ, ಸಂಬಂಧಗಳು ಹೆಚ್ಚಾಗಿ ಮುರಿದು ಬೀಳುತ್ತಿರುವುದಕ್ಕೂ ಇದೇ ಕಾರಣ. ಪರಿಚವಾದ ಹೊಸದರಲ್ಲಿ ಹುಟ್ಟುವ ಆ ಸೆಳೆತ ಕೊನೆಯವರೆಗೂ ಇರಬೇಕು ಅಂದರೆ ಆದೀತ? ಒಬ್ಬ ಪ್ರೀತಿಯ ಉತ್ತುಂಗದಲ್ಲಿರುವ ಹುಡುಗ, ತನ್ನ ಹುಡುಗಿಗೆ 'ನನ್ನ ಕೊನೆಯ ಉಸಿರಿರುವವರೆಗೂ ನಿನ್ನ ಇಷ್ಟೇ ಪ್ರೀತಿಸುತ್ತೇನೆ' ಅಂತ ಭರವಸೆ ಕೊಡುತ್ತಾನೆ. ಅವಳು ಆ ಮಾತಿನ ಮೋಡಿಯಲ್ಲೇ ತೇಲುತ್ತಾಳೆ. ಆ ಕ್ಷಣದಲ್ಲಿ ಅವನಾಡಿರುವು ಮಾತು ಸುಳ್ಳಲ್ಲ. ಆದರೆ ಆ ಮಾತು ಸತ್ಯವಾಗುತ್ತದಾ? ಅವರ ಸಂಬಂಧದಲ್ಲೊಂದು ಅವಶ್ಯಕತೆ ಇದ್ದರೆ, ನೋಡುಗರ ಕಣ್ಣಿಗೆ ಅದು ಸತ್ಯ ಅಂತ ಅನ್ನಿಸಬಹುದೇನೋ. ಇಲ್ಲದಿದ್ದರೆ ಸ್ವಲ್ಪವೇ ದಿನಗಳಲ್ಲಿ ಆ ಮಾತಿನ ಆಯುಷ್ಯ ಮುಗಿದಿರುತ್ತದೆ.

ನಾವೆಲ್ಲ ಒಬ್ಬರಿಗೊಬ್ಬರು ಬೋರ್ ಆಗದೆ ಇರುತ್ತೇವೆಯೇ? ಖಂಡಿತ ಆಗುತ್ತೇವೆ. ಹೊಸ ಗೆಳೆತನಕ್ಕೆ ಹಾತೊರೆಯುತ್ತೇವೆ. ಜೊತೆಗಿರುವ ಗೆಳೆಯನಿಗಿಂತ, ಹೊಸದಾಗಿ ಪರಿಚಯವಾದವರ್ಯಾರೋ ಆಡಿದ ಮಾತುಗಳು ಇಷ್ಟವಾಗುತ್ತವೆ. ನನ್ನ ಗೆಳತಿಯನ್ನು ಆ ಹುಡುಗ avoid ಮಾಡಲು ಇಂತದ್ದೂ ಒಂದು ಕಾರಣ ಇರಬಹುದು. ಹಿಂದೆ ಅವಳೂ ಒಬ್ಬ ಗೆಳೆಯನನ್ನು ಕಾರಣವಿಲ್ಲದೇ avoid ಮಾಡಿರಬಹುದು. ಇವೆಲ್ಲ ಕೇವಲ ಅವಶ್ಯಕತೆಯ ಮೇಲೆ ನಿಂತಿವೆ. ಇದು ಪ್ರತಿಯೊಬ್ಬರ ಜೀವನದಲ್ಲೂ ನಡೆಯುವಂತಹುದು. ಇಂತಹುದರಿಂದ ನಾನೂ ಹೊರತಾಗಿಲ್ಲ.

ಪ್ರತಿಯೊಂದಕ್ಕೂ ಒಂದು ಆಯುಷ್ಯ ಅನ್ನುವದು ಇರಲೇ ಬೇಕಲ್ಲವ. ಆಯುಷ್ಯ ಅಂತ ಇದ್ದರೆ, ಅದು ಒಂದು ದಿನ ಕೊನೆಗಾಣಲೇ ಬೇಕಲ್ಲವ. ಹಾಗೇ ನನ್ನ life ನಲ್ಲಿ PG ಅನ್ನೋ ಒಂದು ಅವಶ್ಯಕತೆಗೆ ಆಯುಷ್ಯ ಮುಗಿದು ಹೋಗಿತ್ತು..... ಎದ್ದು ಬಂದು ಬಿಟ್ಟೆ...

ರಂಜು...

ನಂಗಷ್ಟೇ ಕೇಳೀಸೋ ಹಾಗೆ ನಂಗೊಂದು ಮಾತು ಹೇಳು

Dear ಡುಮ್ಮಣ್ಣ...

ಇವತ್ಯಾಕೊ ಮೂಡು ಸರಿ ಇಲ್ಲ... ಇಡೀ ದಿನ ಏನೋ ತಳಮಳ... ಏನೋ ಒಂದು ತರಹದ ಭಯ.. ಮನಸ್ಸೆಲ್ಲ ಖಾಲಿ ಖಾಲಿ...ಸುಮ್ಮನೆ ಗಾಬರಿಯಾಗುತ್ತಿದೆ... ಈ ಸಾಯಂಕಾಲದಲ್ಲ್ಯಾಕೋ ಒಂಟಿತನ ಇದೆ... ಮದ್ಯಾಹ್ನ ಊಟ ಸೇರಲಿಲ್ಲ... ಇದನ್ನೆಲ್ಲ ನಿನಗೆ ಹೇಳಿಕೊಂಡರೆ...ನಕ್ಕು ಬಿಡುತ್ತಿಯ.. 'ಇಂತಹ ಭಯಗಳು ಇರ್ತವೇನೆ' ಅಂತ ಸಣ್ಣದಾಗಿ ನಗುತ್ತಾ.. ಪ್ರೀತಿ ಮಾಡ್ತೀಯ.. ನಿಂಗೊಂಚೂರು ಸೀರಿಯಸ್ ನೆಸ್ ಇಲ್ಲ. ಒಮ್ಮೊಮ್ಮೆ ಆ ಕಾರಣಕ್ಕೂ ಇಷ್ಟ ಆಗ್ತೀಯ.
ನಿನ್ ಜೊತೆ ಮಾತಾಡಿರೋ ರೆಕೋರ್ಡಿಂಗ್ಸ್ ಕೇಳ್ತಾ ಕೋತಿದ್ದೆ.. ನೀನ್ ಹಾಡಿರೋ ಹಾಡ್ಗಳನ್ನು ಕೇಳುತ್ತಾ.. ಅದರ ಜೊತೆಗೆ ನಾನು ಗುನುಗುತ್ತಾ ನಿನ್ನ ನೆನಪಿನಲ್ಲೆ ತೇಲುತ್ತಾ ಇದ್ದೆ... ಅದೇ ಸಮಯಕ್ಕೆ ರೂಮಿಗೆ ನನ್ನ friend ಒಬ್ಬಳು ಬಂದಳು. ಅವಳಿಗೆ ಬರೀ ಚೇಷ್ಟೆ. 'ನಿನ್ನ boy friend ಸಕ್ಕತ್ತಾಗ್ ಇದಾನೆ ಕಣೆ' ಅಂದಳು. ನಕ್ಕು ಸುಮ್ಮನಿದ್ದೆ. 'ತುಂಬಾ ಚೆನ್ನಾಗಿ ಹಾಡ್ತಾನಲ್ಲೆ' ಅಂದಳು. ನೀನು ಹಾಡುತ್ತಾ ಹಾಡುತ್ತಾ ನಗುವ ಆ ನಗು ನೆನಪಾಯ್ತು... 'ಅವನನ್ನ ಅವಚಿಕೊಂಡು ಕುಳಿತರೆ ನೀನು ಗುಬ್ಬಚ್ಚಿ ಮರಿ ಥರಾ ಕಾಣ್ತೀಯ' ಅಂದಳು. ಸುಮ್ಮನಿದ್ದೆ. 'ನಿನ್ಕು ಮೊದ್ಲು ಅವ್ನು ನನ್ಗೆ ಸಿಗ್ಬೆಕಿತ್ತು ಕಣೆ ನಾನೆ love ಮಾಡ್ತಿದ್ದೆ' ಅಂದ್ಲು ನೋಡು ಕೊಂದುಹಾಕೋಳಂತೆ ಅವಳ ಕುತ್ತಿಗೆ ಹಿಡಿದಿದ್ದೆ.

ತುಮ್ಹೇ ಕೋಯಿ ಔರ್ ದೇಖೆ
ಜಲ್ ತಾ ಹೈ ದಿಲ್...!

'ತಪ್ಪಾಯ್ತು ಕಣೆ, just friend ಮಾಡ್ಕೋತಿನೆ' ಅಂದು ಕೈ ಮುಗಿದ್ರೂ ಬಿಡಲಿಲ್ಲ. 'ಆಯ್ತು ಕಣೆ... ಅಣ್ಣ ಅಂತಿನಿ ಕಣೆ' ಅಂದ್ಳು.. 'ಹೂಂ.. ಇದು ಸರಿ' ಅಂತ ನಕ್ಕು ಮತ್ತೆ ನೀನ್ ಹಾಡಿರೋದನ್ನ ಕೆಳ್ತಾ ಕೂತೆ. ಅವಳ್ ಹೇಳಿದ್ದು ನಿಜ ನೀನೆಷ್ಟು ಚೆನ್ನಾಗಿ ಹಾಡ್ತಿಯಲ್ವ ಡುಮ್ಮಣ್ಣ... ಯಾಕೋ ತಕ್ಷಣ ನಿನ್ನ ನೋಡಬೇಕು ಅನ್ನಿಸಿಬಿಡ್ತು.. ನಿನ್ನ photo ನೋಡ್ಕೊಂಡು ಕೂತುಬಿಟ್ಟೆ. ನನ್ನ friend ನನ್ನ ನೋಡಿ ನಗುತ್ತಾ ಅಲ್ಲಿಂದ ಜಾಗ ಖಾಲಿ ಮಾಡಿದ್ದಳು.. ನಾವಿಬ್ರೂ ಜೊತೆಯಲ್ಲಿ ಎಷ್ಟು ಚೆಂದ ಕಾಣ್ತೀವಲ್ವಾ ಪುಟ್ಟ? Made for each other. ನಾನು ಇನ್ನೊಂದೊಂಚೂರು ಎತ್ತರ ಇರ್ಬೆಕಿತ್ತು.. ಪರ್ವಗಿಲ್ಲ ಹೀಲ್ಡ್ ಚಪ್ಪಲ್ಲಿ ಹಾಕ್ತೀನಿ ಬಿಡು..! ಇನ್ನೊಂದು ಸುತ್ತು ದಪ್ಪ ಆಗಬೇಕು. ಇವಾಗೇನು ಅಮ್ಮನ ಕೈ ತುತ್ತು ತಿಂದು ಒಂದ್ಯಾಕೆ, ನಾಲ್ಕು ಸುತ್ತು ದಪ್ಪ ಆಗಿ ಬರ್ತೀನಿ. ನೀನು ಮಾತ್ರ ಇನ್ನು ದಪ್ಪ ಆಗಬೇಡ ನನ್ನ ಮುದ್ದು ಕರಡಿ ಮರಿ....!! ಪುಟ್ಟಾ ನೀನು ಎಷ್ಟು ಚೆಂದ ಗೊತ್ತಾ? ಅವಚಿಕೊಂಡರೆ ನೀನು ಕೊಡೋ feeling of security ಈ ಜಗತ್ತಿನಲ್ಲಿ ಯಾವ ಭಗವಂತನೂ ಕೊಡಲಾರ. ಅಂದು ಸರಿಯಾಗಿ ರಾತ್ರಿ 11.30 ಗೆ ಮೆಜೆಸ್ಟಿಕ್ ಗೆ ಬಂದು ನಿಂತವಳ ಕಣ್ಣಲ್ಲಿ ಭಯದ ಕಣ್ಣಿರೂ.. ನನ್ನ ಭಯ ನೋಡಿ, ಅಷ್ಟೆಲ್ಲಾ ಜನರು ನೋಡುತ್ತಿದ್ದರೂ, ನನ್ನನ್ನು ಗಟ್ಟಿಯಾಗಿ ಎದೆಗವಚಿಕೊಂಡಿದ್ದೆಯಲ್ಲ ಪುಟ್ಟಾ ನೆನಪಿದೆಯಾ... ನನಗೆ ಭಯದ ನಡುವೆ ನಾಚಿಕೆ ಆವರಿಸಿಕೊಂಡುಬಿಟ್ಟಿತ್ತು... ಅಷ್ಟಾದರೂ ನಿನ್ನ ಅಪ್ಪುಗೆಯಿಂದ ಹೊರ ಬರಲು ನನಗೆ ಇಷ್ಟ ಆಗಿರಲಿಲ್ಲ....

ಭಾವಾಂತರಂಗದಲ್ಲಿ ಅಲ್ಲೋಲ ಕಲ್ಲೋಲ
ಪ್ರೇಮಾಂತರಂಗದಲ್ಲಿ ಏನೇನೋ ಕೋಲಾಹಲ...!

ಹೀಗೆ ನನ್ನ ಮನಸ್ಸಿನ ಭಾವನೆಗಳನ್ನ ಬರೀತಾ ಹೋದ್ರೆ.. ನನ್ನ ಪ್ರೀತಿನ ಹೇಳ್ತಾ ಇದ್ರೆ.. ಪತ್ರ ಓದಿ ಮುಗಿಸಿದ ಮರುಕ್ಷಣ ನನ್ನ ಹತ್ತಿರ ಓಡಿ ಬಂದು ಬಿಡ್ತೀಯೋ ಏನೋ?! ಡುಮ್ಮಣ್ಣ, ವೈಟ್ ಶರ್ಟ್ ಹಾಕಿರ್ತಿಯಲ್ಲ? ಅವತ್ತು ನೀನು ತುಂಬಾ smart ಆಗಿ ಕಾಣಿಸ್ತೀಯ. ನಂಗೆ ಅದ್ಯಾಕೋ ಗೊತ್ತಿಲ್ಲ ಅವತ್ತು ತುಂಬಾ ಭಯ ಆಗುತ್ತೆ. ಯಾವುದಾದರೂ ಹುಡುಗಿ ಅವತ್ತು ನಿಂಗೆ propose ಮಾಡಿಬಿಡ್ತಾಳೆನೋ ಅನ್ನೊ ಭಯ...! ಆ ಕ್ಷಣ, ನನ್ನ ಮನಸ್ಸು ನಿಂಗೆ ಅರ್ಥವಾಗುತ್ತೆನೋ.... ಹಾಗೆ ಅವಚಿಕೊಂಡು ಪುಟ್ಟ ನಗು ನಗುತ್ತೀಯ....! ಆ ನಗು ನಂಗಿಷ್ಟ. ನಾವು ಭೇಟಿಯಾದ ಮೊದಲ ದಿನನೂ ಅಂತಹುದೇ ನಗು ನಿನ್ನ ತುಟಿಯಲ್ಲಿತ್ತು.. ಅವತ್ತು ಮಳೆ ಬರುತ್ತಿತ್ತು ನೆನಪಿದೆಯಾ? ಇಬ್ಬರಿಗೂ ಅದರ ಪರಿವೆ ಇರಲಿಲ್ಲ... ಮಳೆಗೆ ತೊಯ್ದು.. ಚಳಿಯಿಂದ ನಡುಗುತ್ತಿದ್ದವಳನ್ನು ತಬ್ಬಿಕೊಂಡು 'i love you ಜಾನು' ಅಂದಿದ್ದೆ ಅಲ್ವ....! ನೀನು ಕೇವಲ ನನ್ನವನು ಅನ್ನಿಸಿತು...!

ಮೊದಲನೆ ದಿನವೇ ಒಲಿದೇ
ನಿನ್ನ ನಡೆಗೆ.. ನಿನ್ನ ನುಡಿಗೆ...!

ಇಷ್ಟೆಲ್ಲ ನಿನ್ನನ್ನು ಇಷ್ಟಪಟ್ಟರೂ...ನಿಂಗೋಸ್ಕರ ಆಸೆ ಪಟ್ಟರೂ... ಒಮ್ಮೊಮ್ಮೆ ಭಯ ಆಗುತ್ತೆ ಗೊತ್ತಾ? ಏನೋ ತಳಮಳ...ನನ್ನ ಆಸೆ, ಕನಸುಗಳು ಸುಳ್ಳಾಗಿ ಬಿಡುತ್ತವೇನೋ ಅನ್ನೊ ಆತಂಕ...! ನೀನು ನನಗೆ, ಕೊನೆಗೊಂದು ದಿನ ಸಿಗದೇ ಹೋಗಿಬಿಡುತ್ತಿಯೆನೋ ಅನ್ನೊ ಹೆದರಿಕೆ...! ನಂಗೊತ್ತಿಲ್ಲ ಪುಟ್ಟಾ, ನೀನು ನನಗೆ ಬೇಕು. ನೀನು ಬೇರೆ ಯಾರನ್ನೂ ಪ್ರೀತಿಸಲ್ಲ, ಬೇರೆ ಯಾರನ್ನೂ ಮದುವೆ ಆಗಲ್ಲ, ಬೇರೆ ಯಾರನ್ನೂ ಕಣ್ಣೆತ್ತಿ ಕೂಡ ನೋಡಲ್ಲ ಅಂತ ಗೊತ್ತು. ಯಾಕಂದ್ರೆ ಡುಮ್ಮಣ್ಣ, ನನ್ನ ಪರಿಚಯವಾದ ದಿನದಿಂದ ನೀನು ನಿನಗೋಸ್ಕರ ಬದುಕೇ ಇಲ್ಲ.. ಎಲ್ಲ ನನಗೋಸ್ಕರ ಅಂತ ಮಾಡಿದೆ. ನಾನು ಅಷ್ಟೆ. ಏನೂ ಮಾಡಿದರೂ ಅದರಲ್ಲಿ ನೀನಿರ್ತೀಯ. ಇದು ಅವನಿಗೆ ಇಷ್ಟ ಆಗುತ್ತೆ ಅಂತ ಅಂದುಕೊಂಡೇ ಒಂದು ಹಾಡನ್ನ ಕೇಳ್ತೀನಿ. ಅವನಿಗೆ ಇಷ್ಟಾನ ಅಂತ ಕನ್ನಡಿಯನ್ನು ಕೇಳಿನೇ ಹಣೆಗೆ ಬಿಂದಿ ಇಟ್ಕೋತಿನಿ. ನಿನ್ನೆ ಅಮ್ಮನಿಗೆ ಇದನ್ನೇ ಹೇಳ್ತ ಇದ್ದೆ. ಇವನ್ನ ತುಂಬಾ ಇಷ್ಟ ಪಡ್ತಿದೀನಿ. ಮದುವೆ ಅಂತ ಆಗೋದಾದರೆ ಅವನ್ನೆ ಆಗೋದು. ಈ ಸಲ ಅವನು ಇಂಡಿಯಾಗೆ ಬಂದ ಮೇಲೆ ಮನೆಗೆ ಕರೆದುಕೊಂಡು ಬರ್ತೀನಿ. ನಂಗೊತ್ತು, ಅವನು ನಿಮಗೂ ಇಷ್ಟ ಆಗ್ತಾನೆ. ಯಾಕೆಂದ್ರೆ ಅವನು ನಂಗಿಷ್ಟ ಆಗಿದಾನೆ ಅಂತ ಹೇಳಿದೆ.
ಇಷ್ಟೆಲ್ಲ ಹೇಳಿದ ಮೇಲೂ ನನಗೇಕೋ ಭಯವಾಗುತ್ತೆ. ಈ ಸಲ ನನ್ನ ತಬ್ಬಿಕೊಳ್ತಿಯಲ್ಲ... ಆಗ ನಂಗಷ್ಟೇ ಕೇಳೀಸೋ ಹಾಗೆ ನಂಗೊಂದು ಮಾತು ಹೇಳು ಡುಮ್ಮಣ್ಣ...'ನಂಗೆ ನೀನು ಮಾತ್ರ ಇಷ್ಟ' ಅಂತ....

ನಿನ್ನವಳು....

ನಿಮ್ಮೆಲ್ಲರಿಗೂ ಒಂದು 'sorry' ಹೇಳೋದು ಉಳಿದುಬಿಟ್ಟಿದೆ

Dear friends...

friendship ಅನ್ನೊದು ಎಲ್ಲರ life ಲೂ ತುಂಬಾ important ಆಗಿರೋದು. friends ಇಲ್ಲ ಅಂದ್ರೆ life complete ಆಗಲ್ಲ ಅನ್ನಿಸಿಬಿಡತ್ತೆ... ಅದು ನಿಜ.. dear friends.. ನನ್ life ಲೂ ಅಷ್ಟೆ, ನೀವಿರ್ಲಿಲ್ಲ ಅಂದ್ರೆ ನನ್ನ life ಗೂ ಒಂದು ಅರ್ಥ ಇರ್ತ ಇರ್ಲಿಲ್ಲ... ನಿಮ್ಮೆಲ್ಲರ ಆತ್ಮೀಯತೆ, ಪ್ರೀತಿ ನನ್ನ life ನ ಸುಂದರವಾಗಿಸಿದೆ. ನನ್ನ ಸಂತೋಷದ ದಿನಗಳಲ್ಲಷ್ಟೆ ಅಲ್ಲ, ನನ್ನ ದುಃಖದಲ್ಲೂ ನನ್ನ ಜೊತೆ ಇದ್ದು ನಿಮ್ಮ ಒಳ್ಳೆತನ ತೋರಿಸಿದ್ದಿರ. thanks...
But ಒಮ್ಮೊಮ್ಮೆ ಅನ್ನಿಸುತ್ತೆ, ನಿಮ್ಮೆಲ್ಲರ ಪ್ರೀತಿಗೆ ನಾನು ಅರ್ಹಳಲ್ಲವೇನೋ ಅಂತ...!! ನಿಮ್ಮ ಗೆಳೆತನ ನಿಭಾಯಿಸುವಷ್ಟು ಒಳ್ಳೆತನ ನನ್ನಲ್ಲಿಲ್ಲ ಅನ್ನಿಸಿಬಿಡುತ್ತೆ... ಅದು ನಿಜಾನೂ ಇರಬಹುದು... ಒಮ್ಮೊಮ್ಮೆ ತುಂಬಾ 'ನಿರ್ಧಯಿ' ಆಗಿಬಿಡುತ್ತಿನಿ. ನನಗೆ ಇಷ್ಟವಾಗಿಲ್ಲ ಅಂದರೆ, ನಿಮ್ಮ ಇಷ್ಟೆಲ್ಲ ದಿನದ ಸ್ನೇಹವನ್ನೂ ಮರೆತು ಓರಟಾಗಿ ನಡೆದು ಬಿಟ್ಟಿದ್ದೀನಿ. ಒಮ್ಮೊಮ್ಮೆ ನೀವು ನನ್ನ ಓರಟುತನ ಸಹಿಸಲಾಗದೆ, 'ಕಲ್ಲು ಹೃದಯ ಕಣೆ ನಿಂದು' ಅಂತಾನೂ ಹೇಳಿದ್ದಿದೆ. ಈಗ ಯೋಚಿಸಿದರೆ ಅದು ಎಷ್ಟು ನಿಜ ಅಂತ ಅನ್ನಿಸಿಬಿಡ್ತಾ ಇದೆ....
ಇಷ್ಟೆಲ್ಲಾ ಆದರೂ ನಿಮ್ಮ ಆತ್ಮೀಯತೆ ಹಾಗೆ ಇದೆ. ಈಗಲೂ ಒಂದೇ ಮಾತನ್ನು ಹೇಳ್ತೀರ ' ನೀನ್ ನನ್ನ best friend ಕಣೆ' ಅಂತೀರ... ನಿಮ್ಮಂತ friends ನನಗೆ ಸಿಕ್ಕಿದೀರಲ್ಲ ಅದು ನನ್ನ ಅದೃಷ್ಟ.
ಇನ್ನು ಸ್ವಲ್ಪವೇ ದಿನಗಳಲ್ಲಿ ನಾನು ನಿಮ್ಮನ್ನೆಲ್ಲಾ ಬಿಟ್ಟು ತುಂಬಾ ದೂರ ಹೊರಟು ಹೊಗ್ತಾ ಇದಿನಿ. ಆದರೆ ಮನಸ್ಸಿನಿಂದ ಅಲ್ಲ. ನಿಮ್ಮೆಲ್ಲರ ಮನಸ್ಸಿನಲ್ಲಿ ನಾನು ಸದಾ ಒಂದು ಅಳಿಯದ ಚಿತ್ರವಾಗಿ ಇರ್ತೀನಿ ಅಂತ ಅಂದುಕೊಳ್ಳುತ್ತಿನಿ. ಈ ಗೆಳೆತನ ಅನ್ನೊದು ಅಳಿಸಿ ಹೋಗುವಂತಹುದಲ್ಲ. ಎಷ್ಟೆದೂರ ಇದ್ದರೂ, ಎರಡು, ಮೂರು ವರ್ಷಕ್ಕೊಮ್ಮೆ ಭೇಟಿಯಾದರೂ, ಈಗಿರುವ ಆತ್ಮೀಯತೆ ಆಗಲೂ ಹೀಗೆ ಉಳಿದುಕೊಂಡಿರುತ್ತೆ ಅಂದುಕೊಂಡಿದ್ದಿನಿ. ಏನೇ ಆದರೂ ಕಷ್ಟ, ಸುಖ ಹಂಚಿಕೊಳ್ಳಕ್ಕೆ ನೀವೇ ಬೇಕು. ಅದಕ್ಕಿಂತಲೂ ಹೆಚ್ಚಾಗಿ ನನ್ನ ಗಂಡನ ದೂರಕ್ಕಾದ್ರೂ ನೀವೇ ಬೇಕಲ್ವಾ...!!
ಕೊನೆಗೂ ನಾನು ಹೇಳ್ಬೇಕಾಗಿರೋದನ್ನ ನಾನಿನ್ನು ಹೇಳಿಲ್ಲಾ ಅಲ್ವಾ.... ಅದಕ್ಕೆ ಕಾರಣ ನನ್ನ ಅಹಂಕಾರ ಅನ್ನಿಸುತ್ತೆ.. ಈ ನನ್ನ 'ಅಹಂಕಾರ' ನೇ ನಮ್ಮ ಗೆಳೆತನವನ್ನ 'ಅಪೂರ್ಣ' ವಾಗಿಸಿದೆ. ಅದನ್ನು 'ಪೂರ್ಣ' ಗೊಳಿಸಬೇಕಾದುದು ನನ್ನ ಕರ್ತವ್ಯ.
dear friends, ನಿಮ್ಮೆಲ್ಲರಿಗೂ ಒಂದು 'sorry' ಹೇಳೋದು ಉಳಿದುಬಿಟ್ಟಿದೆ. ನಿಮ್ಮ ಮನ ನೋಯಿಸಿದ್ದಕ್ಕೆ, ನಿಮ್ಮ ಆತ್ಮೀಯತೆಯನ್ನ, ಪ್ರೀತಿನ ಸರಿಯಾಗಿ ಅರ್ಥ ಮಾಡಿಕೊಳ್ಳದೇ ಇರೋದಕ್ಕೆ. ಕೊನೆಗೆ ನಿಮ್ಮನ್ನೆಲ್ಲ ಬಿಟ್ಟು ತುಂಬಾ ದೂರ ಹೋಗುತ್ತಿರುವದಕ್ಕೆ... sorry friends. ನನ್ನ ತಪ್ಪನ್ನ ಕ್ಷಮಿಸಿಬಿಡಿ. 'ಪುಟ್ಟ ಮಗುವಿನ ಮನಸ್ಸು ಕಣೆ ನಿಂದು' ಅಂತಿರಲ್ಲ, ಆ ಪುಟ್ಟ ಮಗುವನ್ನ ಕ್ಷಮಿಸಿಬಿಡಿ... ಒಮ್ಮೆ ಕ್ಷಮಿಸಿದಿನಿ ಅಂತ ಅಂದುಬಿಡಿ... ತುಂಬಿ ಬರುತ್ತಿದ್ದ ಕಣ್ಣಿರನ್ನು ಮರೆತು, ನಿಮ್ಮ ಕೈ ಹಿಡಿದು, ಪುಟ್ಟ ನಗುವೊಂದನ್ನು ನಕ್ಕು ಬಿಡುತ್ತೆನೆ...

ಹುಮ್ ರಹೆ ಯಾ ನಾ ರಹೆ ಕಲ್...
ಕಲ್ ಯಾದ್ ಆಯೆಂಗೆ ಯೇ ಪಲ್...
ಪಲ್... ಯೇ ಹೈ ಪ್ಯಾರ್ ಕೆ ಪಲ್..
ಚಲ್ ಆ ಮೆರೆ ಸಂಗ ಚಲ್..
ಚಲ್.. ಸೊಚೆ ಕ್ಯಾ.. ಚೊಟಿಸಿ ಹೈ ಜಿಂದಗಿ...
ಕಲ್ ಮಿಲ್ ಜಾಯೆಂಗೆ ತೋ ಹೋಗಿ ಖುಷ್ ನಸೀಬಿ...
ಹುಮ್ ರಹೆ ಯಾ ನಾ ರಹೆ ಕಲ್ ಯಾದಾಯೆಂಗೆ ಯೇ ಪಲ್.....

ರಂಜು...

ನಮ್ಮೂರಿನಲ್ಲೊಂದು ಹಲಸಿನ ಕಂಬಳ

'ರಂಜು ಹಲಸಿನ ಹಣ್ಣು ಬೇಕನೆ? ಬೇಕಾದ್ರೆ ಬೇಗ್ನೆ ಬಾ.. ಇಲ್ಲ ಅಂದ್ರೆ ಕರ್ಚ ಆಗೋಗ್ತು.’ ಆಶಕ್ಕನ ಕೂಗು, ಎಸ್. ಎಲ್. ಬೈರಪ್ಪನವರ ವಂಶವೃಕ್ಷ ಕಾದಂಬರಿಯನ್ನು 12 ನೇ ಬಾರಿ ಓದುತ್ತಿದ್ದವಳ ಕಿವಿಗೆ ಬಂದು ಅಪ್ಪಳಿಸಿತ್ತು. ಓದುತ್ತಿದ್ದ ಪುಸ್ತಕ ಅಲ್ಲೆ ಬಿಟ್ಟು ಜಗುಲಿಗೆ ಓಡಿ ಬಂದೆ. ಇಡೀ ಊರೇ ನಮ್ಮ ಮನೆ ಜಗುಲಿಯಲ್ಲಿ ನೆರೆದಿತ್ತು.

ಹಲಸಿನ ಹಣ್ಣು ಬಿಡುವ ಕಾಲದಲ್ಲಿ ಊರಿನವರೆಲ್ಲ ನಮ್ಮ ಮನೆಯಲ್ಲಿ ಸೇರಿ ಜಾತ್ರೆಯಗುವುದು ನಿತ್ಯದ ದೃಶ್ಯ.

‘ರಂಜು ಒಳಗೆ ಹೋಗಿ ಚುರು ಉಪ್ಪು ತಗಂಡ ಬಾರೆ, ಮರ್ತೆ ಹೋತು ತಪ್ಪಲ್ಲೆ.’
ಅಂತ ಹೇಳುತ್ತ ಅಮ್ಮ ಪಾತ್ರೆಯಲ್ಲಿರುವ ನಿಂಬೆ ರಸಕ್ಕೆ ಹಸಿ ಮೆಣಸನ್ನು ಸೇರಿಸುವದರಲ್ಲಿ busy ಆಗಿದ್ದರು. ಅಡುಗೆ ಮನೆಯಿಂದ ಉಪ್ಪಿನ ಪಾತ್ರೆ ತಂದು ಅಮ್ಮನ ಕೈಗೆ ಕೊಟ್ಟೆ. ಅಪ್ಪ ಹಲಸಿನ ಹಣ್ಣು ಬಿರಿಯುತ್ತಿದ್ದ. ಕೊನೆಮನೆ ಮಂಜಣ್ಣ (ಮಂಜುನಾಥ ಅಂತ ಅವನ ಹೆಸರು. ಅವನ ಹೆಸರಿಗೆ ಅಣ್ಣ ಸೇರಿಸಿ ಮಂಜಣ್ಣ ಆಗಿದ್ದ.) ಅವರಿಗೆ ಸಹಾಯಕ್ಕೆ ನಿಂತಿದ್ದ.

‘ರಂಜು ಅಕ್ಕ ಅಲ್ನೊಡೆ ಯಾರ್ ಬಂಜ ಹೇಳಿ!’ ಅಂತ ಪಕ್ಕದಲ್ಲೆ ಬಂದು ನಿಂತ ಕೇಶವಚಿಕ್ಕಪ್ಪನ ಮಗ ಪ್ರದೀಪ ಪಿಸುಗುಟ್ಟಿದ್ದ. ಅವನು ಕೈ ತೋರಿಸಿದತ್ತ ನೋಡಿದೆ. ಕೆಳಗಿನ ಮನೆ ಚೈತ್ರ. ಅವಳಮ್ಮನ ಸೆರಗು ಹಿಡಿದು ನಿಂತಿದ್ದಳು. ಅವಳನ್ನು ನೋಡುತ್ತಿದ್ದಂತೆ ಮೈಯೆಲ್ಲ ಉರಿದು, ಕೋಪ ನೆತ್ತಿಗೇರಿ ಮುಖ ಕೆಂಪಗಾಗಿತ್ತು.

‘ರಂಜುಅಕ್ಕ, ಆ ಚೈತ್ರಂಗೆ ಮಾನ, ಮರ್ಯಾದಿ ಎಂತು ಇಲ್ಲೆ ಕಾಣ್ತು. ದೋಸ್ತಿ ಬಿಟ್ಗಂಡ್ರುವಾ ನಮ್ಮನಿಗೆ ಬಂಜು ನೋಡು.’ ಪ್ರದೀಪ ಮೂಗು ಮುರಿಯುತ್ತ ಹೇಳಿದ್ದ. ನನಗೂ ಅವನು ಹೇಳ್ತಿರೋದು ಸರಿ ಅನಿಸಿತು.

ಚೈತ್ರ ನನಗಿಂತ ಒಂದು ವರ್ಷ ಚಿಕ್ಕವಳು, ಚಿಕ್ಕಂದಿನಿಂದ್ಲೂ ಜೊತೆಗೆ ಆಡಿ ಬೆಳೆದವರು, ಸ್ಕೂಲ್ ಗೂ ಒಟ್ಟಾಗಿ ಹೋಗುವುದು ರುಡಿ. ಆದರೆ ಶಾಲೆಯಲ್ಲಿ ಪಂದ್ಯಾಟದ ಸಮಯದಲ್ಲಿ, ಇಬ್ಬರೂ ಬೇರೆ ಬೇರೆ ಆದ್ದರಿಂದ ಆಟದ ಮಧ್ಯೆ ನನ್ನ ಗುಂಪಿನವರಿಗೂ, ಅವಳ ಗುಂಪಿನವರಿಗೂ ಜಗಳವಾಗಿ ನನ್ನ ಅವಳ ಮಾತು ನಿಂತು ಹೋಗಿತ್ತು. ಜೀವದ ಗೆಳ್ತಿಯರಂತೆ ಇದ್ದ ನಾವು, ಈಗ ಬದ್ದ ವೈರಿಗಳಾಗಿದ್ದೆವು. ನಾನು ತುಂಬಾ ಹಠವಾದಿ, ಅಹಂಕಾರಿ, ನನ್ನದೇ ತಪ್ಪಿದ್ದರೂ sorry ಕೇಳುವ ಜಾಯಮಾನ ನನ್ನದಲ್ಲ. (ಈಗ ಹಾಗೇನಿಲ್ಲ ಬಿಡಿ!!) ಅವಳು ಎಷ್ಟು ಸಾರಿ ಮಾತನಾಡಿಸಲು try ಮಾಡಿದರೂ ನಾನು ಮಾತನಾಡಿರಲಿಲ್ಲ. ನಾ ಮಾಡುವ ಪ್ರತಿ ಕೆಲಸಕ್ಕೂ support ಮಾಡಲು ನನ್ನ ತಮ್ಮ, ತಂಗಿಯರಿದ್ದರು. ಮನೆಯಲ್ಲಿ ಅಪ್ಪ, ಅಮ್ಮ, ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಅಣ್ಣ, ಅತ್ತಿಗೆ, ಅಕ್ಕಂದಿರಿಗೆ ಗೊತ್ತಾಗದಂತೆ, ನಮ್ಮೂರಿನ ಎಲ್ಲ ಮಕ್ಕಳ ಮಧ್ಯೆ boss ಗಿರಿ ನಡೆಸುತ್ತಿದ್ದೆ. ಅದನ್ನೆಲ್ಲ ಹೇಳುತ್ತ ಕುಳಿತರೆ ಇವತ್ತಿಗೆ ಮುಗಿಯೋ ಕತೆಯಲ್ಲ ಬಿಡಿ.

ನಾನು ಹೇಳೋಕೆ ಹೊರಟಿರೋದು ಏನಂದ್ರೆ, ಚೈತ್ರ ನಮ್ಮ ಮನೆಗೆ ಹಲಸಿನ ಹಣ್ಣು ತಿನ್ನೋಕೆ ಬಂದಿರೋದು ನನಗೆ ಇಷ್ಟ ಆಗಲಿಲ್ಲ. ನಮ್ಮ ಮನೆಯಲ್ಲಿರಬಹುದು, ಅವಳ ಮನೆಯಲ್ಲಿರಬಹುದು ನಾವು ಜಗಳವಾಡಿಕೊಂಡ ಬಗ್ಗೆ ಗೊತ್ತಿರಲಿಲ್ಲ. ಗೊತ್ತಾಗಲೂ ಬಾರದು. ಗೊತ್ತಾದರೆ ಇಬ್ಬರಿಗೂ ಒಂದೊಂದು ’ಲತ್ತ” ಬೀಳುತ್ತಿತ್ತು.

ಅಪ್ಪ ಹಲಸಿನ ಹಣ್ಣನ್ನು ಬಿರಿದು ಎಲ್ಲರಿಗೂ ಒಂದೊಂದು ಕಡಿ ಕೊಡುತ್ತಿದ್ದರು. ‘ಯಂಗೆ ದೊಡ್ಡ ಕಡಿಬೇಕು.’ ‘ಯಂಗೆ ಹುಳಿ ಅಷ್ಟೇ ಸಾಕು, ಖಾರಾ ಬೇಡ.’ ಹೀಗೆ ಒಬ್ಬರದು ಒಂದೊಂದು ತರಹದ ಬೇಡಿಕೆ, ದೊಡ್ಡ ಗಲಾಟೆಯೇ ನಡೆದಿತ್ತು. ಈ ಎಲ್ಲ ಗಲಾಟೆಯ ಮಧ್ಯೆ ನಾನು, ಪ್ರದೀಪ ಮತ್ತು ಸಂದೀಪನನ್ನ ಚೈತ್ರಳಿಗೆ ‘ಹೊರಟು ಹೋಗು’ ಎಂಬ ಧಮಕಿ ಹಾಕಲು ಕಳುಹಿಸಿದ್ದೆ!!

ಅವರ ಮಾತು ಕೇಳಿದ ಚೈತ್ರ ಅಮ್ಮನ ಸೆರಗು ಬಿಟ್ಟು, ನಮ್ಮನೆಯ ಜಗುಲಿ ದಾಟಿ ಹೊರ ನಡೆದಿದ್ದಳು. ಅವಳು ಹೋಗುತ್ತಿರುವದನ್ನು ನೋಡಿ ನನ್ನ ಮನದಲ್ಲೇನೋ ಸಂತೋಷ, ಏನೋ ಸಾಡಿಸಿಬಿಟ್ಟೆ ಅನ್ನೊ ಗರ್ವ.

‘ಚೈತ್ರ, ಹಲ್ಸಿನ್ಹಣ್ಣು ತಿಂದೆಯಾ ಹೋಗ್ತಾ ಇದ್ಯಲೇ. ಬಾ ಒಂದು ಕಡಿ ತಿಂದು ಹೋಗು.’ ಹೊರಗಡೆಯಿಂದ ಬರುತ್ತಿದ್ದ ನನ್ನ ರವಿಯಣ್ಣ ಅವಳ ಕೈ ಹಿಡಿದು ವಾಪಸ್ ಕರೆದುಕೊಂಡು ಬಂದಿದ್ದ.

ಹಲಸಿನ ಹಣ್ಣಿನ ಪರಿಮಳದ ಮಧ್ಯೆ, ನಮ್ಮ ಜಗಳದ ವಾಸನೆ ಅವನ ಮೂಗಿಗೆ ಬಡಿದಿತ್ತು ಅನಿಸುತ್ತೆ. ಅವಳನ್ನು ಸೀದಾ ಕರೆತಂದು ನನ್ನ ಪಕ್ಕ ನಿಲ್ಲಿಸಿದ್ದ.
‘ರಂಜು, ಚೈತ್ರ ಬಂಜು ನೋಡಿದ್ದಿಲ್ಯ? ಅದಕ್ಕೂ ಒಂದು ಹಲಸಿನ ಕಡಿ ಕೊಡ’ ಅಂತ ನನಗೆ ತಣ್ಣಗೆ ಆಜ್ಞಾಪಿಸಿದ್ದ. ಅಣ್ಣನಿಗೆ ಎದುರಾಡಲು ಭಯ...!! ಮನದಲ್ಲೇ ಬೈದುಕೊಳ್ಳುತ್ತ ಒಂದು ಕಡಿ ಅವಳ ಕೈಗಿರಿಸಿದ್ದೆ.

ಇದರ ಮಧ್ಯೆ ನಿಮಗೊಂದು ವಿಷಯ ಹೇಳಲು ಮರೆತೆ. ಶಿರಸಿ ಹವ್ಯಕರು ಹಲಸಿನ ಹಣ್ಣು ತಿನ್ನುವ ರೀತಿಯೇ different. ಉಪ್ಪು, ಸುಳಿ, ಖಾರದಲ್ಲಿ ಹಲಸಿನ ಸೊಳೆಯನ್ನು ಅದ್ದಿ ಬಾಯಿಗಿಟ್ಟುಕೊಂಡರೆ ಅದರ ರುಚಿಯೆ ಅದ್ಭುತ ಅನ್ನೊದು ಶಿರಸಿ ಹವ್ಯಕರ ಅಂಬೋಣ. ಬೀಜ ಸಹಿತ ಹಲಸಿನ ಸೊಳೆಯನ್ನು ಬಾಯಿಗಿಟ್ಟು, ತಿಂದು, ನಂತರ ಬೀಜ ಉಗುಳಿದರೆ ಅದು ಹಲಸಿನ ಹಣ್ಣುನ್ನು ತಿನ್ನುವ ನಿಜವಾದ ರೀತಿ ಅನ್ನೊ ಒಂದು ಮಾತು ನಮ್ಮೂರಿನ ಕಡೆ ಇದೆ. ಹಾಗೆ ಸಲೀಸಾಗಿ ತಿನ್ನೊರಿಗೆ ’ಎಂಥ expert’ ಅನ್ನೊ certificate ಸಹ ಸಿಗುತ್ತದೆ.

ನಿಮಗೆ ಇದನ್ಯಾಕೆ ಹೇಳಿದೆ ಅಂದರೆ, ’ಎಂಥ expert!’ ಅನ್ನೊ certificate ನನಗಿನ್ನು ಸಿಕ್ಕಿಲ್ಲ. ನನ್ನ ಪ್ರಕಾರ ಮುಂದೆ ಸಿಗೋ chance ಇಲ್ಲ ಅನ್ನಿಸುತ್ತೆ. ಊರಲ್ಲಿದ್ದಾಗಲೇ ಸಿಗದಿರುವಂತಹುದು, ಈ ಮಾಹಾನಗರಿ ಸೇರಿದ ಮೇಲೆ...!! ಶಿರಸಿಗೆ ಹೋಗುವುದೇ ಅಪರೂಪವಾದಾಗ, ಅಂತಹುದೊಂದು ’ಹಲಸಿನ ಕಂಬಳ’ ನೋಡುವುದು....!! ಅದೆಲ್ಲ ಅಸಾದ್ಯದ ಮಾತು ಬಿಡಿ.

ಈಗ ವಿಷಯಕ್ಕೆ ಬರೋಣ. ನನಗೆ ಹಲಸಿನ ಸೊಳೆಯನ್ನು ತಿನ್ನುವುದೇ ಒಂದು ಕಷ್ಟದ ಕೆಲಸ. ಯಾವಾಗಲೂ ಅಮ್ಮ ಬೀಜ ಬೇರ್ಪಡಿಸಿ ಕೊಡಿತ್ತಿದ್ದರು. ಎಲ್ಲರೂ ನನ್ನ ನೋಡಿ ನಗುವವರು, ಗೇಲಿ ಮಾಡುವವರು.

‘ರಂಜು, ನೀನು ನಮ್ಮೂರಲ್ಲಿ ಹುಟ್ಟಿದ್ದು ವೆಸ್ಟಲೇ. ಸರಿಯಾಗಿ ಹಲಸಿನ ಹಣ್ಣು ತಿಂಬಲ್ಲು ಬತ್ತಿಲ್ಯಲೆ... ಯಾವಾಗ ಕಲ್ಗತ್ಯೆ?’ ಊರಲ್ಲಿ ‘ಕಂಬಳ’ start ಆದರೆ ಇದೇ ಮಾತು ಎಲ್ಲರ ಬಾಯಲ್ಲಿ. ಅವಮಾನವಾಗುತ್ತಿತ್ತು. ಒಮ್ಮೊಮ್ಮೆ ಅತ್ತಿದ್ದೂ ಇದೆ. (ಚಿಕ್ಕವಳಿರುವಾಗ ಅಳೋಕೆ ’ಇಂತದ್ದೂ’ ಒಂದು ಕಾರಣ ಇರುತ್ತಿತ್ತು ನೋಡಿ.)

ಅಮ್ಮ ಸೊಳೆ ಬಿಡಿಸಿ ಹುಳಿಯಲ್ಲಿ ಅದ್ದಿ ಕೊಡುತ್ತಿದ್ದರೆ ನಾನು ಅರಾಮವಾಗಿ ಬಾಯಿಗಿಟ್ಟುಕೊಳ್ಳುತ್ತಿದ್ದೆ. ನನ್ನ ಪಕ್ಕ ಕುಳಿತ ಚೈತ್ರ ‘expert’ ಆಗಿ ಬಿಟ್ಟಿದ್ದಳು. ಒಮ್ಮೆ ಅವಳ ಮುಖ ನೋಡಿದೆ. ಸಣ್ಣದಾಗಿ ನಕ್ಕಳು. ಅವಳು ನಕ್ಕಿದ್ದು ಸ್ನೇಹದಿಂದಲೇ ಆದರೂ ನನಗೆ ನನ್ನ ರೇಗಿಸುತ್ತಿದ್ದಾಳೆ ಅನ್ನಿಸಿತು. ಅವಮಾನವಾದಂತಾಗಿ ಮುಖ ತಿರುಗಿಸಿ ಕುಳಿತೆ...!!

‘ಇವತ್ತು ಪರಮ ಇಲ್ಯನ? ಪ್ಯಾಟಿಗೆ ಹೋಜ್ನ ಎಂತನಪ. ಹಲ್ಸಿನ ಹಣ್ಣಿನ ವಾಸ್ನೆ ಕೇಳಾದ್ರೂ ಈ ಬದಿಗೆ ಸುಳ್ಯಕ್ಕಾಗಿತ್ತು.’ ಪಕ್ಕದ ಮನೆ ಸರೋಜತ್ಗೆ ನೆನಪಿಸಿದ್ದಳು.
‘ಬೆಳಿಗ್ಗೆ ಬಸ್ ಸ್ಟಾಪಲ್ಲಿ ಇದ್ದಿದ್ನಪಾ. ಸಿರ್ಸಿಗೆ ಹೋಗವು ಸೊಸೈಟಿಲಿ ಕೆಲ್ಸಿದ್ದು ಹೇಳಿ ಹೇಳ್ತಿದ್ದ. ಮಧ್ಯನ್ಹನೆ ಬರಕ್ಕಾಗಿತ್ತು. ಇನ್ನೂ ಬಂಜ್ನಿಲ್ಯಕು’ ನನ್ನ ಅಪ್ಪ ಉತ್ತರಿಸುತ್ತಿದ್ದಂತೆ...
‘ಎಂತ್ರೋ ಯನ್ ಬಿಟ್ಟಿಕ್ಕೆ ಬರ್ಜರಿ ಕಂಬ್ಳ ಮಾಡ್ತ ಇದ್ದಿ.’ ಎನ್ನುತ್ತ ಪರಮಣ್ಣ ಜಗುಲಿಯ ಓಳಗೆ ಕಾಲಿರಿಸಿದ್ದ.
‘ಅರೆ ಮಾರಾಯ, ನೂರ್ ವರ್ಷ ಆಯುಷ್ಯ ನೋಡು. ಈವಾಗ್ ನಿನ್ ಬಗ್ಗೆನೆ ಮಾತಾಡ್ತ ಇದ್ದಿದ್ಯ’ ರಮೇಶಣ್ಣ ಉದ್ಗರಿಸಿದ್ದ.
‘ನಿನ್ ಸಂತಿಗೆ ಇವೊಬ್ಬ ಇದ್ದ ನೋಡು’ ಆಶಕ್ಕ ನನ್ನ ಕಿವಿಯಲ್ಲಿ ಪಿಸುಗುಟ್ಟಿ ಸಣ್ಣದಾಗಿ ನಕ್ಕಳು. ನನಗೆ ಕೋಪ ಬಂದರೂ ಏನು ಹೇಳಲಾರದೆ ಸುಮ್ಮನೆ ಕುಳಿತಿದ್ದೆ. ಪರಮಣ್ಣನೂ ನನ್ನ ತರಹ ‘expert’ ಆಗದೇ ಉಳಿದವನು. ‘ಪರಮಣ್ಣನಹಂಗೆಯಲೆ’ ಅಂತ ನನಗೆ ರೇಗಿಸಿವುದೂ ಇತ್ತು. ‘expert’ ಆಗದೇ ನಮ್ಮೂರಿನಲ್ಲಿ ಬದುಕುತ್ತಿರುವ ಎರಡು ಜೀವಿಗಳು - ನಾನು ಮತ್ತು ಪರಮಣ್ಣ.

ಪರಮಣ್ಣ ಬಂದವನೇ ಒಂದು ಕಡಿಗೆ ಕೈ ಹಾಕಿದ್ದ. ಅವನು ಬಂದನೆಂದರೆ ಅಲ್ಲಿ ಹಾಸ್ಯ, ನಗು, ತುಂಬಿ ತುಳಿಕುತ್ತದೆ. ಸ್ವಲ್ಪ ಬುದ್ಧಿ ಕಡಿಮೆ ಇರುವ ಅವನಿಗೆ ಎಲ್ಲರೂ ರೇಗಿಸುವವರೇ. ಅವನ ಮೇಲೊಂದು joke ಹೇಳಿ ನಗುವವರೇ. ಹಾಗೇ, ಯಾರ ಮಾತನ್ನೂ ಮನಸ್ಸಿಗೆ ಹಚ್ಚಿಕೊಳ್ಳದೆ ಮುಗ್ಧ ಮಾತುಗಳನ್ನಾಡುವ ಅವನೆಂದರೆ ಎಲ್ಲರಿಗೂ ಇಷ್ಟಾನೆ.

ಹೀಗೆ ಹಾಸ್ಯದ ಮಧ್ಯೆ ಕೆಳಗಿನ ಮನೆ ಶೇಖರ ಭಟ್ರು (ಚೈತ್ರಳ ತಂದೆ)
‘ಪರಮ, ಇಷ್ಟೆಲ್ಲ ಜೋರ್ ಇದ್ದೆ ಮಾರಾಯ ನೀನು, ಹಲ್ಸಿನ ಹಣ್ಣು ಬೀಜಗೂಡೆ ತಿಂಬಲ್ಲೆ ಬತ್ತಿಲ್ಯಲೋ’ ಅಂತ ರೇಗಿಸಿದ್ದರು.
‘ನೋಡ ಪರ್ಮಣ್ಣ ಎಲ್ರೂ ಹಿಂಗೆಲ್ಲ ಹೇಳ್ತ್ವಲ. ಇವತ್ ಎಂತೆ ಆಗ್ಲಿ ಒಂದು ಸೊಳೆನಾದ್ರೂ ತಿಂದು ತೋರ್ಸ್ ಬಿಡು ನೋಡನ’ ಅಂತ ನನ್ನ ಅಣ್ಣಂದಿರು ಅವನನ್ನು ಹುರುದುಂಬಿಸಿದರು. ಎಲ್ಲರೂ ಒಂದೊಂದು ಮಾತು ಹೇಳುತ್ತಿದ್ದಂತೆ.. ಎಲ್ಲಿಂದಲೋ ಪರಮಣ್ಣನಿಗೆ ಜೋಶ್ ಬಂದು, ಬೀಜ ಸಹಿತ ಒಂದು ಹಲಸಿನ ಸೊಳೆಯನ್ನು ಬಾಯಿಗಿಟ್ಟುಕೊಂಡೇಬಿಟ್ಟ.

ಮುಂದೆ ಆಗಿದ್ದೇನು.....?!

‘expert’ ಅನ್ನೊ ಪಟ್ಟ ಅವನಿಗೂ ಸಿಕ್ಕಿತಾ?!

ಎಲ್ಲರೂ ಕುತೂಹಲದಿಂದ ಅವನನ್ನೇ ನೋಡುತ್ತಿದ್ದರು....

ಬಾಯಿಂದ ಹೊರಬರಬೇಕಿದ್ದ ಬೀಜ ಹೊಟ್ಟೆಯೋಳಗಿಳಿದಿತ್ತು...!!

ಪರಮಣ್ಣ ಬೀಜ ಸಹಿತ ಹಲಸಿನ ಸೊಳೆಯನ್ನು ನುಂಗಿಬಿಟ್ಟಿದ್ದ...!!

ಹಾಗಾದ್ರೆ ಅವನು ‘double expert’ ಆಗ್ಬಿಟ್ನಾ?!

ಗೊತ್ತಿಲ್ಲ...!

ನೀವು ಏನಂತಿರಾ?!


ರಂಜು...